ಕೆ.ಬಿ.ಸಿದ್ದಯ್ಯ ಕನ್ನಡ ಸಾಹಿತ್ಯ ಲೋಕ ಕಂಡ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ. ನೊಂದವರ, ದಮನಿತರ ದನಿಯಾಗಿ, ಹೋರಾಟದ ಕಿಡಿ, ಹಣತೆ ಸಿದ್ದಯ್ಯ. ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ. == ಜನನ/ಜೀವನ == ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಕೆರೆಯಲ್ಲಿ ಬೈಲಪ್ಪ ಮತ್ತು ಅಂತೂರಮ್ಮನವರ ಪುತ್ರರಾಗಿ 1954 ಮಾರ್ಚ್ 4 ರಂದು ಜನಿಸಿದ ಕೆ.ಬಿ.ಸಿದ್ದಯ್ಯ, ಅಲ್ಲಿಂದ ತುಮಕೂರಿಗೆ ಬಂದು ನೆಲೆಸಿದರು. ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. 1970-80ರ ದಶಕದಲ್ಲಿ ದಲಿತ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ಖಂಡ ಕಾವ್ಯವನ್ನೇ ವಿಶಿಷ್ಟವಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕೆಬಿ ಅವರದ್ದು. 'ದಕ್ಲಕಥಾದೇವಿ', 'ಬಕಾಲ', 'ಅನಾತ್ಮ', 'ಗಲ್ಲೇಬಾನಿ' ಈ ನಾಲ್ಕು - ಖಂಡಕಾವ್ಯಗಳಾದರೆ; 'ಕತ್ತಲೊಡನೆ ಮಾತುಕತೆ', 'ಬುದ್ದನ ನಾಲ್ಕು ಶ್ರೇಷ್ಠ ಸತ್ಯಗಳು' ಇವು ಗದ್ಯ ಬರಹಗಳು. ದಲಿತ ಚಳವಳಿಯೊಂದಿಗೆ ಮುನ್ನಡೆದು ಬಂದಿದ್ದ ಕೆಬಿ ರಾಜ್ಯದ ಉದ್ದಕ್ಕೂ ಸಾಹಿತ್ಯ ವಲಯದಲ್ಲಿ ಪ್ರಭಾವ ಬೀರಿದ್ದರು. ಬುದ್ಧ ಮತ್ತು ಅಲ್ಲಮನ ಕುರಿತು ಗಂಭೀರವಾಗಿ ಓದಿಕೊಂಡಿದ್ದರು. ಅಲ್ಲಮನ ವಚನಗಳನ್ನು ಸಭಿಕರಿಗೆ ಮನವರಿಕೆಯಾಗುವಂತೆ ವಿವರಿಸುತ್ತಿದ್ದರು. ಒಳಮೀಸಲಾತಿಯ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. == ಕೃತಿಗಳು == ಬಕಾಲ ದಕ್ಲಕಥಾದೇವಿ ಕಾವ್ಯ ಅನಾತ್ಮ (ಕಾವ್ಯ) ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ) ದಲಿತಕಾವ್ಯ (ಸಂಪಾದನೆ) ಮುಂತಾದವು == ಪ್ರಶಸ್ತಿ-ಪುರಸ್ಕಾರಗಳು == ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ (2೦೦4) ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2013) == ಮರಣ == ಸಿದ್ದಯ್ಯನವರು ಕೆಲ ದಿನಗಳ ಹಿಂದೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಗ್ರಾಮದ ಬಳಿ ಇರುವ ಅವರ ತೋಟಕ್ಕೆ ಹೋಗುವಾಗ ಕಾರು ಅಪಘಾತವಾಗಿತ್ತು. ಅವರ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಯ್ಯನವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವವಾಗಿದ್ದರಿಂದ ಸಿದ್ದಯ್ಯನವರ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:೧೮-೧೦-೨೦೧೯ರಂದು ಕೊನೆಯುಸಿರೆಳೆದಿದ್ದಾರೆ. ಸಾಮಾಜಿಕ ಕಳಕಳಿ ಜೊತೆಜೊತೆಗೆ ಕನ್ನಡದ ಹಾಗು ದಲಿತಪರ ಧ್ವನಿ ಇಂದು ಮರೆಯಾಗಿದೆ. ಕುದೂರು ಹೋಬಳಿಯ ಕೆಂಕೆರೆ ಗ್ರಾಮಕ್ಕೆ ಸಂಜೆ5.15 ಕ್ಕೆ ಅವರ ಪ್ರಾರ್ಥಿವ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ರಾತ್ರಿ 7 ಕ್ಕೆ ಅಂತ್ಯ ಸಂಸ್ಕಾರ ನೇರವೇರಿತು. ಸಿದ್ದಯ್ಯನವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಬಿಟ್ಟು ಅಗಲಿದ್ದಾರೆ. == ಉಲ್ಲೇಖ ==